ಧಿಯೋ ಯೋನಃ ಪ್ರಚೋದಯಾತ್....

ಧಿಯೋ ಯೋನಃ ಪ್ರಚೋದಯಾತ್....

Wednesday, September 05, 2007

ನಾಟ್ ವರ್ಣಿಸೇಬಲ್..

ಬುಲೆಟ್ಟು!!..
ಹತ್ತಿ ಕೂತ್ಕಳ್ಳದೊಂದೇ ಪ್ರಾಬ್ಲಮ್ಮು.. ಹೊರಟಮೇಲೆ ನೋ ಪ್ರಾಬ್ಲಂ!!
ಮೊನ್ನೆ ನಮ್ಮ ತುಂಬಳ್ಳಿ ಅಮರನ ಬುಲೆಟ್ಟು ಹೊಡೆದೆ. ಅವತ್ತು ಪ್ರಮೋದನ ಜರ್ಮನಿ ಫ್ಲೈಟ್ ಇತ್ತು. ಏರ್ ಪೋರ್ಟಿಂದ ವಾಪಸ್ ಬರ್ತಾ ನಾನು ಬೈಕ್ ತಗೋಂಡೆ. ಆಹಹಾ!! ಏನ್ ಫೀಲಿಂಗು ಅಂತೀರಿ!!.. ಬೈಕ್ ಮೇಲಲ್ಲ, ಆರಾಮ ಕುರ್ಚಿ ಮೇಲೆ ಕೂತ ಹಾಗೆ!.. ಹಿಂಬದಿ ಕೂತವರಿಗೂ ಒಳ್ಳೆ ಆರಾಮು.. ಹಿಂದುಗಡೆ, ಮುಂದುಗಡೆ ಎರಡು ಕಡೆನೂ ಒರಗಿಕೊಳ್ಳಬಹುದು (depends on who is sitting behind).. ;) ಹ್ಹೆಹ್ಹೆಹ್ಹೆ..
ಹೊರಟ ತಕ್ಷಣ ಒಂಥರಾ ಗತ್ತು ಆವರಿಸಿಕೊಳ್ಳತ್ತೆ, ನಾನೇ ರಾಜ ಅಂತ!.. ಪಕ್ಕದಲ್ಲಿ ಯಾವೊನಾದ್ರೂ ಸುಂಯ್ಯಂತ ಓವರ್‍ಟೇಕ್ ಮಾಡಿದ್ರೂ ಅವನ ಜೊತೆ ರೇಸ್ ಮಾಡ್ಬೇಕು ಅನ್ಸಲ್ಲ.. "poor fellow, ಪುಟಗೋಸಿ ವೆಹಿಕಲ್‍ನ ಅಳಿಸ್ತಿದಾನೆ.." ಅಂತ ಅವನ ಮೇಲೆ ಕರುಣೆ ಬರುತ್ತೆ..
ಹೂಂ, ತಿರುವಿನಲ್ಲಿ ಬೈಕ್ ಬೆಂಡ್ ಮಾಡೋದು ಅಂದ್ರೇನು ಅಂತ ಬುಲೆಟ್ನಲ್ಲಿ ಕಲೀಬೇಕು.. ನಮ್ ಕೆಲಸ ಬರೀ ಬೆಂಡ್ ಮಾಡೋದಷ್ಟೆ, ಬೈಕ್ ತನ್ನಿಂತಾನೇ ವಾಪಸ್ ನೆಟ್ಟಗಾಗತ್ತೆ!.. ಒಂಥರಾ secured feeling, ಬೇರೆ ಬೈಕ್‍ಗೆ ಹೋಲಿಸಿದ್ರೆ..ಮರುದಿನ ಬೆಳಿಗ್ಗೆ, ಮನೆಗೆ ಹೋಗೋಣಾಂತ ನನ್ ಬೈಕ್ ತಗೋಂಡೆ.. ಯಾವ್ದೋ ಕೆಟ್‍ಕಿಲುಬು ಹಿಡಿದ ಸೈಕಲ್ ಥರಾ ಅನಿಸ್ಬಿಡ್ತು.. ಗಿರಿಬಾವ ಹೇಳೋದು ನಿಜ, "other bikes are only bikes.. but bulet?.. its a pleasure!!"

Wednesday, August 22, 2007

ರಾಜು ಎಂಬ BODYಯ ಬ್ಲಾಗು..

ನಮ್ಮ ದೋಸ್ತನ ಲಹರಿ ಮೊದಲ ಬಾಲಿಗೇ ಸಿಕ್ಸರ್ ಹೊಡೆದಿದೆ!!

Friday, July 27, 2007

ಬ್ಲಾಗಿಷ್ಟರ ಬಳಗಕ್ಕೆ ಮತ್ತೊಂದು ಸೇರ್ಪಡೆ..

ನನ್ನ ಹಳೆಯ ಗೆಳೆಯ (ಅರ್ಥಾತ್, ಚಡ್ಡೀ ದೋಸ್ತು) ಶ್ಯಾಮ, ನಮ್ಮ ಕಿಟ್ಟಿಸಾರ್ ಮಗ, ಬ್ಲಾಗ್ ಶುರು ಮಾಡಿದ್ದಾನೆ.
"ಹುಚ್ಚು ಮನಸಿನ ಹಲವು ಮುಖಗಳು"
ಸಹೃದಯಿ, ಉಪ್ಪಿಯ ಕಟ್ಟಾಭಿಮಾನಿ, ಕನ್ನಡಾಭಿಮಾನಿ ಗೆಳೆಯನಿಗಿದೋ, "ಹರಟೆಮಲ್ಲರ ಗುಂಪಿಗೆ ಸ್ವಾಗತ".ಅವನನ್ನೂ ಪ್ರೊತ್ಸಾಹಿಸಿ....
ವಿಶ್ವಾಸವಿರಲಿ,
-LD

Tuesday, July 10, 2007

ಮೆಸ್ ಇನ್‌ಚಾರ್ಜು ಮತ್ತು ಪಿಯುಸಿ ಹುಡುಗರ ಪಲಾಯನ ಪ್ರಸಂಗ

ಕಾಲೇಜಿಗೆ ಸೇರಿದ್ದು ಹಿಂಗೆ:
ಆಗ ತಾನೆ ಎಸ್ಸೆಸೆಲ್ಸಿ ಮುಗ್ದಿತ್ತು. ಆವತ್ತು ಬುಧವಾರ ಅಜ್ಜನ ವೈದಿಕ, ಎಲ್ಲಾ ನೆಂಟ್ರೂ ಬಂದಿದ್ರು. ಊಟಾದಮೇಲೆ ಮಾತಾಡ್ತಾ ಕೂತಿದ್ರು. ಹುಡ್ರನ್ನ ಕಾಲೇಜಿಗೆ ಸೇರಿಸೋ ವಿಚಾರ ಪ್ರಸ್ತಾಪಕ್ಕೆ ಬಂತು. ತೀರ್ಥಹಳ್ಳಿ ತುಂಗಾ ಕಾಲೇಜು, ಸಾಗರದ ಎಲ್.ಬಿ. ಕಾಲೇಜು ಬ್ಯಾಡ ಅಂತಾಯ್ತು. ಉಳಿದಿದ್ದು ಶಿವಮೊಗ್ಗದ ಡಿ.ವಿ.ಎಸ್. ಕಾಲೇಜು. ಅದಕ್ಕೇ ಸೇರಿಸೋಣ ಹುಡ್ರನ್ನ(ಅಂದ್ರೆ, ಲಿಂಗ್ದಳ್ಳಿ ಅಪ್ಪಿ, ಪಡವಗೋಡು ಅಪ್ಪಿಮತ್ತು ಬೇಳೂರು ಅಪ್ಪಿ....) ಅಂತ ತೀರ್ಮಾನಕ್ಕೆ ಎಲ್ಲರೂ ಬಂದ್ರು. ಅಷ್ಟೊತ್ತಿಗೆ ನೋಡಿ, ಬೇಳೂರು ಅಜ್ಜನ ಎಂಟ್ರಿ!! "ಅಲ್ಲಿಗೆಲ್ಲ ಎಂತಕಾ? ಉಜಿರೆಗೆ ಸೇರ್ಸಿ ಬಿಡನ.. ಭಾಳ ಚೆನ್ನಾಗಿದ್ದು, ಹುಡ್ರೂ ಹಿಡ್ತದಾಗಿರ್ತ" ಅಂತ ಸಲಹೆ ಕೊಟ್ಟ.... ಲಿಂಗ್ದಳ್ಳಿ ಅಪ್ಪಿಗೆ ದುಃಖ ಆಯ್ತು, "ಊರ್ ಬಿಟ್ಟು ಕಳುಸ್ತ್ರಲ, ಮಕ್ಳು ಬಗ್ಗೆ ನಿಂಗಕೇನೂ ಅನ್ಸದಿಲ್ಯಾ?".... ಅಂವ ಬಾಯ್ಬಿಟ್ಟು ಹೇಳ್ಲಿಲ್ಲ. ಎಲ್ಲ ಸರಿಯಾಗಿ ನಡೆದು, ತಿಂಗಳ ನಂತರ ಮೂರು ಜನರೂ ಉಜಿರೆ ಕಾಲೇಜಿಗೆ ಸೇರಿದ್ರು. ಲಿಂಗ್ದಳ್ಳಿ, ಪಡವಗೋಡು ಹುಡ್ರು ಹಾಸ್ಟೆಲ್‌ನಲ್ಲಿ, ಬೇಳೂರು ಅಪ್ಪಿ ಕಾನುಮನೆ ಮೆಸ್‌ನಲ್ಲಿ ಸೇರಿದ್ರು(ಬೇರೆಬೇರೆ ಯಾಕೆ ಅನ್ನದು ಮತ್ತೊಂದು ದೊಡ್ಡ ಕಥೆ). ಕಾಲೇಜು ಚೆನ್ನಾಗಿತ್ತು, ನಡಿತಾ ಇತ್ತು ಹೀಗೆ.. ಇತ್ತ ಹಾಸ್ಟೆಲ್‌ನಲ್ಲಿ "ಸಾಗರದ ಹುಡ್ರಿಗೆ" ಮೆಸ್ ಇನ್‍ಚಾರ್ಜು ಅಂತ ವಹಿಸಿಕೊಡಲಾಯ್ತು. ಮೊದಲು ನಾಕುದಿನ ಇವ್ರ ಠಾಕುಠೀಕೇನು, ಮನೆಗೆ ಫೋನ್ ಮಾಡಿ ಹೇಳಿ ಖುಶಿ ಪಡದೇನು.... ಆದ್ರೂ ಹಾಸ್ಟೆಲ್ ಒಂಥರಾ ಸರಿಯಾಗ್ತಿರಲಿಲ್ಲ ಇಬ್ರಿಗೂ. ಕಣ್ಣೆದುರಿಗೇ ಇಬ್ರು ಹಾಸ್ಟೆಲ್‌ಮೇಟ್ಸ್ ಉಜಿರೆ ಬಿಟ್ಟು ಅವರವರ ಊರಿನ ಕಾಲೇಜಿಗೆ ಟ್ರಾನ್ಸ್‌ಫರ್ ತಗೊಂಡು ಹೋದ್ರು(ಅದ್ರಲ್ಲೂ ಒಬ್ಬ ಇವರ ರೂಂಮೇಟ್). ಇವರಿಗೆ ಮತ್ತಷ್ಟು ತಲೆಬಿಸಿ ಶುರುವಾಯ್ತು.
ಹಬ್ಬ ಹರಿದಿನ , ನೆಂಟ್ರಿಷ್ಟ್ರು, ಕ್ರಿಕೆಟ್ಟು ಏನೂ ಇಲ್ಲ. ಬೆಲ್ ಹೊಡ್ದ ತಕ್ಷಣ ಊಟ ತಿಂಡಿ, ದಿನಕ್ಕೆ ಬರೀ ಒಂದರ್ಧ ಗಂಟೆ ಟೀವಿ.. ಬೆಳಿಗ್ಗೆ ೫ ಗಂಟೆಗೆ ಏಳಲಿಕ್ಕೆ ಬೆಲ್ಲು(ಬೆಳಿಗ್ಗೆ ೫ ಗಂಟೆ? ಗಡಿಯಾರದಲ್ಲಿ ಬೆಳಿಗ್ಗೆ ೫ ಗಂಟೆ ಅಂತ ಅವರು ನೋಡಿದ್ದು ತಿಳುವಳಿಕೆ ಬಂದಮೇಲೆ ಹಾಸ್ಟೆಲ್‌ನಲ್ಲೇ ಮೊದಲು).. ಬೆಳಿಗ್ಗೆ ಅರ್ಧಗಂಟೆ ಯೋಗ, ಕೊನೆಗೆ ಸ್ಟಡಿಟೈಮ್, ಸ್ನಾನ ಮಾಡಕ್ಕೆ ಕ್ಯೂ, ತಣ್ಣಗಾಗಿರೋ ತಿಂಡಿ, ಮದ್ಯಾಹ್ನ ಮತ್ತೆ ಹತ್ತೇ ನಿಮಿಷಕ್ಕೆ ಊಟ(ಕಾಲೇಜಿಗೆ ಓಡಿಹೋಗ್ಬೇಕಲ್ಲ).. ಸಂಜೆ ಸ್ಟಡಿ ಅವರ್ಸ್.... ತಲೆ ಚಿಟ್ಟುಹಿಡಿದು ಗೊಬ್ರಾಗಕ್ಕೆ ಇನ್ನೇನು ಬೇಕು?.. ಸ್ಟಡಿ ಟೈಮ್‌ನಲ್ಲಿ ಇಬ್ರೂ ಮಾತಾಡಿಕೊಳ್ತಿದ್ರು, "ಬಾವಯ್ಯ, ಈ ಊರು ಯಾಕೊ ಸರಿಯಿಲ್ಲೆ, ಯಾಕಾದ್ರೂ ಬಂದ್ವೋ ಅನ್ನುಸ್ತು" ಅಂತ ಪಡವಗೋಡಪ್ಪಿ ಹೇಳಿದ್ರೆ, ಲಿಂಗ್ದಳ್ಳಿ ಅಪ್ಪಿ, "ಹೂಂ ಬಾವಯ್ಯ, ಊರಾಗೇ ಸೇರಿದ್ರೆ ಚನ್ನಾಗಿತ್ತು" ಅಂತಿದ್ದ.

ಹೀಗೇ ಇರಲೊಂದು ದಿನ:
ಆ ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ಅಡುಗೆಭಟ್ರಿಗೆ ಮಧ್ಯಾಹ್ನದ ಅಡುಗೆಗೆ ಬೇಕಾದ ಸಾಮಾನನ್ನೆಲ್ಲಾ ಕೊಟ್ಟು ಇವರಿಬ್ರೂ ಹೊರಗಡೆ ಪೇಟೆಗೆ ಹೋದ್ರು(ವಾರದಲ್ಲಿ ಒಂದೇ ದಿನ, ಹೊರಗಡೆ ಬಿಡೋದು). ಸುಮಾರು ೨ ತಾಸಿನ ನಂತರ ಹಾಸ್ಟೆಲ್‌ಗೆ ವಾಪಸ್ ಬಂದ್ರು. ಲಿಂಗ್ದಳ್ಳಿ ಅಪ್ಪಿ, ಅಡುಗೆಮನೆಯಲ್ಲಿ ಎಲ್ಲಾ ತಯಾರಾಗಿದೆಯಾ ಅಂತ ನೋಡಿಕೊಂಡು ಬರಲು ಹೋದ. ಅಡುಗೆಮನೆ ಬಾಗಿಲು ಚಿಲಕ ಹಾಕಿತ್ತು. ಭಟ್ರು ಬಹುಶಃ ಕೆಲಸ ಮುಗಿಸಿ ಮನೆಗೆ ಹೋಗಿರಬಹುದೇನೋ ಎಂದುಕೊಂಡು ಅಡುಗೆಮನೆ ಬಾಗಿಲು ತೆಗೆದ. ಅಷ್ಟೆ!! ಅಲ್ಲಿ ನೋಡಿದ ದೃಶ್ಯ ಅವನನ್ನು ಬೆಚ್ಚಿಬೀಳಿಸಿತು. ಹೆದರಿಕೆಯೋ, ಹೇಸಿಗೆಯೋ ಏನಾಯ್ತು ಗೊತ್ತಿಲ್ಲ, ಧಡ್ಡನೆ ಅಡುಗೆಮನೆ ಬಾಗಿಲು ಹಾಕಿದವನೇ, ರೂಮಿಗೆ ಓಡಿದ. "ಬಾವಯ್ಯ, ಬಾವಯ್ಯ.... ಮನೆಗೆ ಹೋಗ್ಬುಡನ ನಡಿ, ಇಲ್ಲಿರದೇ ಬ್ಯಾಡ...."
"ಯಂತಾತ? ಯಂತಕ್ಕೆ ಹಿಂಗೆ ಗಾಬ್ರಿ ಆಯ್ದೆ?".
"ಅದೆಲ್ಲ ಹೇಳಕ್ಕೆ ಟೈಮಿಲ್ಲೆ.. ಪ್ಯಾಕ್ ಮಾಡನ ನಡಿ.".
"ಸರಿ ಹಂಗಾದ್ರೆ.. ಊಟ ಮಾಡ್ಕ್ಯಂಡು ಮಾಡನ".
"ಹೂ.. ಆದ್ರೆ ಊಟ ಹೊರಗಡೆ ಮಾಡ್ಕ್ಯಂಡು ಬರನ".
"ಏ, ಯಂತಾಯ್ದು ಹೇಳಾ.. ಹೊರಗಡೆ ಯಂತಕೆ?".
"ಅದೆಲ್ಲ ಕೇಳಡ ಪ್ಲೀಸ್.. ಇವತ್ತೇ ಹೊರಡನ...".
"ಸರಿ ನೀ ಹೇಳಿದ್ಮೇಲೆ.. ಯಂತದೋ ನಡ್ದಿರಕು, ನೀ ಹೇಳ್ತಾ ಇಲ್ಲೆ.."
ಲಿಂಗ್ದಳ್ಳಿ ಅಪ್ಪಿಗೆ ಅಲ್ಲಿ ನೋಡಿದ ದೃಶ್ಯ ಮತ್ತೆ ಮನಸ್ಸಿನಲ್ಲಿ ಹಾದುಹೋಯಿತು.. ಆಡುಗೆಮನೆಯ ಕಿಟಕಿಯ ಜಾಲರಿಯ ದೊಡ್ಡ ಕಿಂಡಿಯಿಂದ ಆಗಷ್ಟೆ(?!) ಒಳಗೆ ಬಂದ ಮಂಗವೊಂದು ಅಲ್ಲಿ ಕಟ್ಟೆಯ ಮೇಲಿಟ್ಟ ಹುಳಿಯ ಪಾತ್ರೆಯ ಕಡೆಗೆ ಕೈಚಾಚುತ್ತಿತ್ತು.. ಹೊಟ್ಟೆಯಾಳದಿಂದ ಹೇವರಿಕೆಯೊಂದು ಬಂದಂತಾಗಿ, ಬಾಗಿಲನ್ನು ಹಾಗೇ ದೂಕಿ, ಲಿಂಗ್ದಳ್ಳಿ ಅಪ್ಪಿ ರೂಮಿಗೆ ಓಡಿದ್ದ.
ಅವರು ಪೇಟೆಗೆ ಹೋಗಿ ಊಟ ಮಾಡಿ, ಪ್ಯಾಕ್ ಮಾಡಿ ಹೊರಡುವ ಹೊತ್ತಿಗೆ ಮಧ್ಯಾಹ್ನ ೨:೩೦... ಆದರೆ ೨:೨೦ಕ್ಕೆ ಬೆಳ್ತಂಗಡಿಯಿಂದ ಸಾಗರಕ್ಕೆ ಹೊರಡುವ ಮಿನಿ ಬಸ್ಸು ಹೋಗಿಯಾಗಿತ್ತು. ಲಿಂಗ್ದಳ್ಳಿ ಅಪ್ಪಿ ಹೇಳಿದ, "ಬಾವಯ್ಯ, ಲೇಟಾಗೋತು.. ನಾಳೆ ಹೊರಡನ..ನಂಗೆ ಇನ್ನು ನಾಳೆ ಬೇಳಿಗ್ಗೆನೇ ಮೇಗರವಳ್ಳಿಗೆ ಡೈರೆಕ್ಟ್ ಬಸ್ಸು".
"ನಾನು ಇವತ್ತೇ ಹೋರಡ್ತಿ ಸಾಗರಕ್ಕೆ.. ಚಾರ್ಮಾಡಿ-ಶಿವಮೊಗ್ಗದ ರೂಟ್ ಮೇಲೆ ಬಸ್ಸ್ ಇದ್ದು..".
"ಸರಿ.. ಊರಲ್ಲಿ ಸಿಗನ ಹಂಗಾದ್ರೆ".
ಪಡವಗೋಡಪ್ಪಿ ಚಾರ್ಮಾಡಿ ಮೇಲೆ ಶಿವಮೊಗ್ಗಕ್ಕೆ ಹೊರಡುವ ಬಸ್ಸು ಹತ್ತಿದ. ಇತ್ತ ಹಾಸ್ಟೆಲ್‌ನಲ್ಲಿ ಲಿಂಗ್ದಳ್ಳಿ ಅಪ್ಪಿಗೆ ಚಡಪಡಿಕೆ. ನಾಳೆ ಬೆಳಿಗ್ಗೆ ತಾನು ಊರಿಗೆ ಹೊರಡುತ್ತೇನೆ, ಹೋದಮೇಲೆ ಏನಾಗಬಹುದು? ಅಪ್ಪ ಬೇರೆ "ಅಲ್ಲೇ ಓದಕ್ಕು.. ವಾಪಸ್ ಬಂದ್ರೆ ಇಲ್ಲೆಲ್ಲೂ ಕಾಲೇಜಿಗೆ ಸೇರ್ಸದಿಲ್ಲೆ.. ದನ ಕಾಯ್ಕ್ಯಂಡು ಇರ್ಲಕ್ಕಡ" ಅಂತ ಅವತ್ತು ಫೊನ್ ಮಾಡಿದಾಗ ಹೇಳಿದ್ದ.. ಏನಾದ್ರಾಗ್ಲಿ, ಹೋಗದೇ ಸೈ ಅಂತ ಮನಸ್ಸಿನಲ್ಲಿ ನಿರ್ಧಾರ ಮಾಡಿಕೊಂಡು ಅವತ್ತಿನ ದಿನ ದೂಡಿದ. ಅತ್ತ ಪಡವಗೋಡಪ್ಪಿ ಅವತ್ತೇ ತಡರಾತ್ರಿ ಸಾಗರ ತಲುಪಿದ. ತನ್ನ ಮನೆಗೆ ಹೋಗದೆ, ಸೀದಾ ಸಾಗರದಲ್ಲಿದ್ದ ತನ್ನ ಚಿಕ್ಕಪ್ಪನ ಮನೆಗೆ ಹೋದ. ಪಾಪ ಚಿಕ್ಕಪ್ಪನೋ ಬಹಳ ಸೌಮ್ಯ ಮನುಷ್ಯ. ಅವನು ಅಣ್ಣನಿಗೆ(ಅಂದ್ರೆ ಪಡವಗೋಡಪ್ಪಿಯ ಅಪ್ಪನಿಗೆ) ಫೋನಿಸಿದ.
"ಅಣ್ಣ.. ಅಪ್ಪಿ ಮನಿಗೆ ಬೈಂದ.. ಇಲ್ಲೇ ಇದ್ದ.. ಅವಂಗೆ ಉಜಿರೆ ಬ್ಯಾಡ್ದಡ..".
"ಹಾಂ!!.. ಇಲ್ಲೆಲ್ಲೂ ಕಾಲೇಜಿಗೆ ಸೇರ್ಸದಿಲ್ಲೆ ಅಂತ ಬೈಯ್ಯಕ್ಕಾಗಿತ್ತು ನೀನು?"
"ಹಂಗೆ ಹೇಳ್ದಿ ಅವಂಗೆ.. ಸೇರ್ಸದಿದ್ರೆ ಇಲ್ಲೆ.. ಮನೆಲೇ ಇರ್ತಿ ಅಂತಾ ಇದ್ದ.. ಏನ್ ಮಾಡದು?.. ನಾಳೆ ಲಿಂಗ್ದಳ್ಳಿ ಅಪ್ಪಿನೂ ಅಲ್ಲಿಂದ ವಾಪಸ್ ಹೊಂಟಿದ್ನಡ..".
"ನಾನು ಅರ್ಜೆಂಟಾಗಿ ಲಿಂಗ್ದಳ್ಳಿ ಬಾವಂಗೆ ಫೋನ್ ಮಾಡ್ತಿ". ಪಡವಗೋಡು ಅಪ್ಪಿಯ ಅಪ್ಪ, ತನ್ನ ಲಿಂಗ್ದಳ್ಳಿ ಬಾವನಿಗೆ(ಅಂದ್ರೆ ಲಿಂಗ್ದಳ್ಳಿ ಅಪ್ಪಿಯ ಅಪ್ಪನಿಗೆ) ಫೋನ್ ಮಾಡಿ ವಿಷಯ ತಿಳಿಸಿದ. ಬೇಳೂರು ಅಜ್ಜನಿಗೂ ವಿಷಯ ಗೊತ್ತಾಯ್ತು. ಅಂವ ಹೇಳಿದ್ದು ಒಂದೇ ಮಾತು, "ಇದೆಲ್ಲಾ ಲಿಂಗ್ದಳ್ಳಿ ಅಪ್ಪಿದೇ ಕಿತಾಪತಿ". ಅವರಲ್ಲಿ ಏನೋ ಮಾತುಕತೆ ಆಯ್ತು. ತಾವು ಯಾರೂ ಹೇಳಿದ್ರೂ ಕೇಳೋ ಸ್ಥಿತಿಯಲ್ಲಿ ಇಲ್ಲೆ ಹುಡುಗ್ರು, ಇವರನ್ನ ಅಲ್ಲೇ ಇರಕ್ಕೆ ಒಪ್ಸಕ್ಕೆ ಒಬ್ಬನಿಗೆ ಮಾತ್ರ ಸಾಧ್ಯ, ಅದ್ರಲ್ಲೂ ಲಿಂಗ್ದಳ್ಳಿ ಅಪ್ಪಿನ ಒಪ್ಸಕ್ಕೆ ಅವನೊಬ್ನೇ ಸೈ, ಪಡವಗೋಡು ಅಪ್ಪಿಯ ಸಣ್ಣ ಚಿಕ್ಕಪ್ಪನನ್ನೇ ಶಾಂತಿದೂತನನ್ನಾಗಿ ಉಜಿರೆಗೆ ಕಳಿಸೋದು ಅಂತ ನಿರ್ಧಾರ ಆಯ್ತು. ಇತ್ತ ಹಾಸ್ಟೆಲ್‌ನಲ್ಲಿ ಲಿಂಗ್ದಳ್ಳಿ ಅಪ್ಪಿ ಬೆಳಿಗ್ಗೆ ೫ ಗಂಟೆಗೇ ಎದ್ದು ಊರಿಗೆ ಹೊರಡುವ(ಐ ಮೀನ್, ಓಡಿಹೋಗುವ.. ಹ್ಹೆಹ್ಹೆಹ್ಹೆ) ಸಂಭ್ರಮದಲ್ಲಿದ್ದ. ೭:೩೦ಕ್ಕೆ ಬೆಳ್ತಂಗಡಿಯಿಂದ ಬಸ್ಸು. ೬ ಗಂಟೆಗೆ ಸರಿಯಾಗಿ ಇವನಿಗೆ ಹಾಸ್ಟೆಲ್ ಎದುರಿಗಿದ್ದ ಫೋನ್‌ಬೂತ್ ಅಂಕಲ್ ಬಂದು ಹೇಳಿದ್ರು, "ನಿನ್ನ ತಂದೆ ಫೋನ್ ಮಾಡಿದ್ರು.. ನೀನು ಇವತ್ತು ಎಲ್ಲೂ ಹೋಗ್ಬಾರ್ದಂತೆ.. ಕಾಲೇಜಿಗೂ ಹೋಗೋದು ಬೇಡವಂತೆ.. ನಿನ್ನ ಸಣ್ಣ ಮಾವ ಪಡವಗೋಡು ಹುಡುಗನ್ನೂ ಕರ್ಕೊಂಡು ಬರ್ತಾ ಇದಾರಂತೆ".... ಇವನಿಗೋ ಧರ್ಮ ಸಂಕಟ, ಹಿಂಗಾಯ್ತಲ್ಲ ಅಂತ. ಹೊರಟೇ ಬಿಡೋಣ ಅಂದುಕೊಂಡ. "ಆದ್ರೆ ತನ್ನನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಸಣ್ಣಮಾವ ಬರ್ತಿದ್ದಾನಲ್ಲ, ಅವನಿಗೂ ಹೇಳಿ ಒಪ್ಪಿಸ್ತೀನಿ.. ಅವನಿಗೂ ತೋರಿಸ್ತೀನಿ ಇಲ್ಲಿಯ ಪರಿಸ್ಥಿತಿಯನ್ನ.. ಅಂವ ಹೇಳಿದ್ರೆ ಯಾರೂ ಇಲ್ಲ ಅನ್ನಲ್ಲ ಕೊನೆಗೆ" ಅಂದುಕೊಂಡು ಸುಮ್ಮನಾದ. ಪಡವಗೋಡು ಅಪ್ಪಿ, ಅವನ ಚಿಕ್ಕಪ್ಪ ಮದ್ಯಾಹ್ನ ೨:೩೦ರ ಹೊತ್ತಿಗೆ ಹಾಸ್ಟೆಲ್‌ಗೆ ಬಂದ್ರು.
ಸಂಜೆ ೬ ಗಂಟೆ ಹೊತ್ತಿಗೆ ಲಿಂಗ್ದಳ್ಳಿ ಅಪ್ಪಿಗೆ ಅವನ ಸಣ್ಣಮಾವ ವಾಕಿಂಗಿಗೆ ಕರೆದ. ಇಬ್ರೂ ವಾಕಿಂಗ್ ಮಾಡ್ತಾ ಕಾಲೇಜು ದಾಟಿ ಊರ ಹೊರಗಡೆ ಹೋದ್ರು. ಸಣ್ಣಮಾವ ಮಾತಿನ ಮಧ್ಯೇ ಹೇಳಿದ, "ಪುಟ್ಟಾ, ನೀನು ಇವತ್ತು ಈ ಉಜಿರೆ ಬ್ಯಾಡ ಅಂತ ಹಟ ಮಾಡ್ದೆ, ಸರಿ.... ನಿನ್ನ ಪರಿಸ್ಥಿತಿ ನಂಗೆ ಅರ್ಥ ಆಗ್ತು. ಆದ್ರೆ ಒಂದು ತಿಳ್ಕ, ಇವತ್ತು ನೀನು ಗಟ್ಟಿ ಮನ್ಸು ಮಾಡಿದ್ರೆ ಮುಂದೊಂದು ದಿನ ಇದನ್ನ ನೆನೆಸ್ಕ್ಯತ್ತೆ. ಕಾಲೇಜು ಜೀವನ ಅನ್ನದು ನೀನು ಮುಂದೆ ಏನಾಗಕ್ಕು ಅನ್ನೋ ದಾರಿ ತೋರುಸ್ತು. ನೀನು ಇನ್ನೂ ಊರಿಗೇ ಹೋಗಕ್ಕು ಅಂದ್ರೆ, ಹ್ಯಾಂಗಿದ್ರೂ ಪ್ಯಾಕ್ ಮಾಡಿ ಆಯ್ದು. ನಾನು ಮಾತಾಡ್ತಿ ನಿನ್ ಅಪ್ಪನ ಹತ್ರ, ಊರಿಗೆ ಹೋಗ್ಬುಡನ.... ಆದ್ರೆ ಇವತ್ತು ಊರಿಗೆ ಹೋಗೋ ಅವಸರದ ನಿರ್ಧಾರ ತಗಂಡು, ಮುಂದೊಂದು ದಿನ ನನ್ಹತ್ರಾನೇ ಬಂದು ಮಾವ, ಅವತ್ತು ಉಜಿರೆಲೇ ಇರಕ್ಕಾಗಿತ್ತು ಅನ್ನ ಪರಿಸ್ಥಿತಿ ತಂದ್ಕಳ್ಳಡ. ನನ್ ಅಭಿಪ್ರಾಯದಲ್ಲಿ ನೀನು ಈ ಎರಡು ವರ್ಷ ಇಲ್ಲೇ ಇದ್ದು ಒಂದ್‌ಕೈ ನೋಡು. ಹಂಗೂ ಒಂದ್‌ವೇಳೆ ಆಗದೇ ಇಲ್ಲೆ ಅಂತಾದ್ರೆ ನಾ ಇದ್ದಿ, ಹೆದರ್ಕ್ಯಳ್ಳಡ". ಲಿಂಗ್ದಳ್ಳಿ ಅಪ್ಪಿಗೂ ಧೈರ್ಯ ಬಂತು, ಹೇಳಿದ "ಆತು ಮಾವ, ನೀ ಹೇಳಿದಂಗೇ ಆಗ್ಲಿ. ನೋಡೇಬಿಡನ, ಇಲ್ಲೆ ಯಾಕೆ ಬದುಕಕ್ಕಾಗದಿಲ್ಲೆ ಅಂತ? ಇನ್ನು ಎರಡು ವರ್ಷ ನೋಡ್ತಾ ಇರು, ಇಲ್ಲೇ, ಉಜಿರೆಲೇ ಬದುಕಿ ತೋರುಸ್ತಿ". ಅವರಿಬ್ರೂ ಹಾಸ್ಟೆಲ್ಲಿಗೆ ವಾಪಸ್ ಬಂದು ಪಡವಗೋದಪ್ಪಿಗೂ ಹೇಳಿ ಒಪ್ಪಿಸಿದ್ರು. ಮಾವ ಊರಿಗೆ ಹೋದ. ಕಾಲೇಜು ಜೀವನ ವಿಧ್ಯುಕ್ತವಾಗಿ ಆರಂಭವಾಯ್ತು.
ಉಪಸಂಹಾರ:
ಲಿಂಗ್ದಳ್ಳಿ ಅಪ್ಪಿ ತಾನು ಆಡುಗೆಮನೆಯಲ್ಲಿ ನೋಡಿದ್ದನ್ನ ವಾರ್ಡನ್‌ಗೆ ಹೇಳಿ, ಅಡುಗೆಮನೆಯನ್ನ ರಿಪೇರಿ ಮಾಡಿಸಿದ. ಆ ವಿಚಾರ ಇವನಿಗೆ, ವಾರ್ಡನ್‌ಗೆ ಬಿಟ್ಟರೆ ಯಾರಿಗೂ ಗೊತ್ತಾಗಲಿಲ್ಲ. ಆ ವರ್ಷವಿಡೀ ಅವನು ಮೆಸ್‌ ಇನ್‌ಚಾರ್ಜ್ ಆಗಿದ್ದ. ಮುಂದೆ ಎರಡು ವರ್ಷ ಕಳೆದಮೇಲೆ, ಇಬ್ರೂ ಇಂಜಿನಿಯರಿಂಗ್ ಸೇರಿದ್ರು. ನಾಕು ವರ್ಷದ ನಂತರ ಒಳ್ಳೆ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿದ್ರು. ಆಗಾಗ ತಮ್ಮ ಪಲಾಯನ ಪ್ರಸಂಗವನ್ನು ನೆನೆಸಿಕೊಂಡು ಈಗಲೂ ನಗುತ್ತಿರುತ್ತಾರೆ.

Friday, June 08, 2007

ಒಂದು ಸಿಂಪಲ್ ಪ್ರಶ್ನೆ..

ಎಂದಿನಂತೆ ಅವತ್ತೂ ಸಂಜೆ ಅವನು ೬:೧೦ಕ್ಕೆ ಆಫೀಸ್ ಬಿಡುತ್ತಾನೆ. ಡಬ್ಬಲ್ ರೋಡ್ ದಾಟಿ, ರಿಚ್ಮಂಡ್ ಸರ್ಕಲ್ ತಿರುಗಿ, ಹಡ್ಸನ್ ಸರ್ಕಲ್ ಹತ್ತಿರ ಬಂದಾಗ ೬:೩೦. ಅವನಿಗೆ ಏನೋ ನೆನಪಾಗುತ್ತದೆ. ಟ್ರಾಫಿಕ್ ಸಿಗ್ನಲ್ ನಲ್ಲಿ ಬೈಕ್ ನಿಲ್ಲಿಸಿದವನ ಕಣ್ಣುಗಳು ಏನನ್ನೋ ಹುಡುಕುತ್ತವೆ.... ಅದೋ ಅಲ್ಲಿ!.... ಸಿಗ್ನಲ್ ಕ್ಲಿಯರ್ ಆದ ಮೇಲೆ ಬೈಕ್ ನಿಧಾನವಾಗಿ ಚಲಿಸುತ್ತದೆ. ೧೦ ಮಾರು ದೂರ ಹೋಗುವಷ್ಟರಲ್ಲೇ ಅವನು ಮತ್ತೆ ಬೈಕ್ ನಿಲ್ಲಿಸುತ್ತಾನೆ. ಪರ್ಸಿನಲ್ಲಿಯ ೧೦ ರೂಪಾಯಿ ನೋಟು ತೆಗೆದು ಕೈಚಾಚುತ್ತಾನೆ. ಪಕ್ಕದ ಫೂಟ್ ಪಾತ್ ನಿಂದ ಚಾಚಿದ, ಕೊಳಕಾಗಿ ಜಡ್ಡುಗಟ್ಟಿದ ಅಂಗೈಯಲ್ಲಿ ನೋಟನ್ನಿಡುತ್ತಾನೆ. ಒಂದು ಕ್ಷಣದಲ್ಲಿ ಏನೇನೊ ಆಲೋಚನೆಗಳು ತಲೆಯಲ್ಲಿ ಸಚಿತ್ರವಾಗಿ ಗಿರಗಿಟ್ಲೆ ಹೊಡೆಯತೊಡಗುತ್ತವೆ. ತಂತಾನೆ ಒಂದು ನಿಶ್ಯಬ್ದ ನಿಟ್ಟುಸಿರು. ಹಿಂಬದಿಯ ಹಾರ್ನ್ ಕೇಳಿ ಬೈಕ್ ಯಾಂತಿಕವಾಗಿ ಮನೆಯ ದಾರಿ ಹಿಡಿಯುತ್ತದೆ. ಕಳೆದ ೪ ದಿನಗಳಿಂದ ಅವನದು ಈ ದಿನಚರಿ.
ಹೌದು.. ಸರ್ಕಲ್ ನ ಫೂಟ್ ಪಾತ್ ನಲ್ಲಿ ಕುಳಿತಿದ್ದವನಿಗೆ ಎರಡೂ ಕಾಲಿಲ್ಲ; ಪೋಲಿಯೋದಿಂದಾಗಿ ತ್ರಾಣ ಕಳೆದುಕೊಂಡಿವೆ. ಆತ ದಿನಾ ಅಲ್ಲಿ ಬಂದು ಕುಳಿತಿರುತ್ತಾನೆ(ಬರ್ತಾನೆ?.. ಎಲ್ಲಿಂದ?.. ಅಸಲಿಗೆ ಸಂಜೆಯಾದಮೇಲೆ ಎಲ್ಲಿಗೆ ಹೋಗುತ್ತಾನೆ?.. ಮಳೆ ಬಂದ್ರೆ?.... ಬೆಳಿಗ್ಗೆ ತಿಂಡಿ ತಿಂದು ಬರುತ್ತಾನಾ?.. ಮಧ್ಯಾಹ್ನ ಊಟ?.. ಹೋಗ್ಲಿ, ರಾತ್ರಿಗೆ?..). ಆತ ತಾನಾಗಿಯೇ ಯಾವತ್ತೂ ಕೈಯೊಡ್ಡಲ್ಲ. ಕೊಡೋರು ಕೈಮುಂದೆ ಮಾಡಿದರೆ ಕಷ್ಟಪಟ್ಟು ತೆವಳಿಕೊಂಡು ಬಂದು ಕೈಚಾಚಿ ತೆಗೆದುಕೊಳ್ಳುತ್ತಾನೆ. ತೆವಳೀ ತೆವಳೀ ಕೊಳಕಾಗಿ ಒಡೆದ ಅಂಗಾಲಂತಾಗಿರುವ ಅಂಗೈಗಳು, ಜಡ್ಡುಗಟ್ಟಿದ ಮೊಣಕಾಲ್ಗಳು.... ಅವು ಜಗತ್ತಿಗೆ ಏನು ಹೇಳುತ್ತವೋ ಗೊತ್ತಿಲ್ಲ; ಅದರೆ, ನೆಲಕ್ಕೆ ಅಲೆದು ಹರಿದು ಹೋಗಿರುವ ಮಾಸಲು ಅಂಗಿಯ ಮುಂಬದಿಯ ಅಂಚು, ಯಾವುದೋ ಕಥೆ ಹೇಳುತ್ತದೆ....
ನನ ಬಾಲ್ಯದಾಗ ಕಷ್ಟ ಪಟ್ಟಿದ್ದು
ನನಗ ನೆನಪು ಇಲ್ಲ,
ಹತ್ತು ವರುಷದಾ ಹಿಂದೆ ಆ ಬಾಲ್ಯದಾ
ನೆನಪು ಕಾಡತಾವ ಎಲ್ಲ....

ಐದು ಜನರ ಸಂಸಾರದೊಳಗ
ಆಗಿದ್ದೆ ನಾ ಮುದ್ದಿನಾಂವ,
ಆದರೇನು ನಮ ಮ್ಯಾಲೆ
ಜನರ ಹಾಳ್ಗಣ್ಣು ಬೀಳತಾವ....

ಒಂದು ಮುಂಜಾನಿ ಎಲ್ಲ ಮಂದೀಗು
ಜ್ವರಾ ಹಿಡಿದುಕೊಂತ,
ಶಿವಾ ಬರೆದಿಟ್ಟ ನನ್ನ ಹಣೆಯಲ್ಲಿ
ನಡೆಯಬಾರದಂತ....

ನಾಕು ದಿನದಲ್ಲಿ ಈ ಅನಾಥನಾ
ಬಿಟ್ಟು ಹ್ವಾದರೆಲ್ಲ,
ಬಂಗಾರದಂಥ ಸಂಸಾರ ಹೋಗಿ
ಬೀದೀಗೆ ಬಿದ್ದೆನಲ್ಲ....

ಬೈಕ್ ಮನೆಗೆ ಬಂತು. ಸಾಯಿಶಕ್ತಿ ಹೋಟೆಲ್ ನಲ್ಲಿ ಆ ರಾತ್ರಿ ಅವರಿಬ್ಬರು ಎರಡೆರಡು ಪ್ಲೇನ್ ಪರೋಟ, ವೆಜ್ ಕಡಾಯ್ ಹೇಳಿ ಕುಳಿತಿದ್ದರು. ಯಾವುದೋ ಹರಟೆ, ಮಧ್ಯೆ ಪೋಲಿ ಜೋಕು ಇತ್ಯಾದಿ.. ಬಿಸಿಬಿಸಿ ಪರೋಟ ಬಂದ ತಕ್ಷಣ ಇಬ್ಬರದೂ ಮಾತು ಕಮ್ಮಿಯಾಗಿತ್ತು. ಅರ್ಧ ಪರೋಟ ಮುಗಿಸಿಲ್ಲ, ಹೊರಗೆ ಕುಂಭದ್ರೋಣ. ಎದುರಿಗಿದ್ದಂವ ಕೇಳಿದ, "ಮನೆಗೆ ಹ್ಯಾಗೆ ಹೋಗೋದು? ಮಳೆ ಬಂತಲ್ಲ?". ಯಾಕೋ ಇವನಿಗೆ ಹಡ್ಸನ್ ಸರ್ಕಲ್ ನೆನೆಪಾಯಿತು.."ಮಳೆ ಬಂದ್ರೆ?....". ಯಾರೋ ತಿವಿದಂತಾಯ್ತು, "ಆಹಾ, ತಿನ್ನು ತಿನ್ನು.... ತಿಂಗ್ಳ ಕೊನೆಗೆ ಸಾವಿರಗಟ್ಲೆ ಎಣಿಸ್ತೀಯ, ಬರೀ ಹತ್ರುಪಾಯಿ ಕೊಟ್ಟೇಂತ ದೊಡ್ಮನುಷ್ಯ ಆಗ್ಬಿಟ್ಯಾ?.. ಈಗೇನೋ ಮಳೆ ಬಂದು ಆ ಹುಡುಗನ ನೆನಪಾಯ್ತು;.. ವೀಕೆಂಡ್ ನಲ್ಲಿ ಫ್ರೆಂಡ್ಸ್ ಮನೆಗೋಗಿ ಮಜಾ ಮಾಡ್ತೀಯಲ್ಲ, ಆವಾಗ ನಿಂಗೇನೂ ಅನ್ಸಲ್ವಾ?.. ಅಲ್ಲಾ, ಪರ್ಸಲ್ಲಿ ಹತ್ರುಪಾಯಿ ನೋಟಿತ್ತು, ಕೊಟ್ಟೆ; ಅದೇ ಬರೀ ಸಾವಿರ್ರುಪಾಯಿ ನೋಟುಗಳೇ ಇದ್ದಿದ್ರೆ ಕೊಡ್ತಿದ್ಯಾ?.. ಈಗ ಹೇಳು.. ಉತ್ರ ಇದ್ಯಾ?.. ಮಳೆ ಬರ್ತಿದೆ, ಅವನ ಕತೆ ಏನಾಯ್ತೋ ಅಂತ ಬರೀ ಯೊಚ್ನೆ ಮಾಡ್ತೀಯಲ್ಲ, ಹೋಗಿ ನೋಡ್ಕೊಂಡು ಬರಕ್ಕಾಗಲ್ವಾ? ನಿಂಗೆ ಕಾಲಿಲ್ವಾ?.."....
ಎದುರಿಗಿದ್ದವನಿಗೆ ಹೇಳಿದ, "ಯಾಕೋ ಸೇರ್ತಾ ಇಲ್ಲ..".... "ಯಾಕೆ?"...."ಹಸಿವಿಲ್ಲ".. ಇವನಿಗೆ ಮಾತ್ರ ಗೊತ್ತು, ಕಾರಣ ಏನು ಅಂತ.
ಆದರೆ, ಆ ಸಿಂಪಲ್ ಪ್ರಶ್ನೆಗೆ ಉತ್ರ ಇದೆಯೇ?.....
ವಿಶ್ವಾಸವಿರಲಿ,
- ಎಲ್.ಡೀ

Friday, February 16, 2007

"ಆವರಣ"- ಒಂದು ಅನಾವರಣ....

ಭೈರಪ್ಪನವರ ಕಾದಂಬರಿಗಳು ಬೋರ್ ಹೊಡೆಸುತ್ತವೆ ಎಂದುಕೊಂಡಿದ್ದವನಿಗೆ ಗೃಹಭಂಗ ಓದಿದಮೇಲೆ ಗೊತ್ತಾಯ್ತು, ಐ ವಾಸ್ ವೆರಿ ರಾಂಗ್. ಅದಾದಮೇಲೆ ಅವರ ಮತ್ತೆರಡು ಕಾದಂಬರಿಗಳನ್ನು ಓದಿದೆ. ನಾಯಿನೆರಳು, ಸಾರ್ಥ. ಎರಡನ್ನೂ ಒಂದೊಂದೇ ಗುಕ್ಕಿನಲ್ಲಿ ಓದಿ ಮುಗಿಸಿದೆ. ಈಗ ಭೈರಪ್ಪನವರ ಎಲ್ಲಾ ಕೃತಿಗಳನ್ನು ಸಂಗ್ರಹಿಸುವ ಕಾತರ.....
ಪೂರ್ವಾಭ್ಯಾಸ, ವಿಷಯ ಸಂಗ್ರಹಣೆ-ವಿಂಗಡಣೆ, ಸಂಗ್ರಹಿತ ವಿಷಯದ ಮೇಲೊಂದು ಕಾದಂಬರಿಯ ಸಣ್ಣ ಎಳೆ ಹೊಸೆದು, ಅದನ್ನು ಕಲಾತ್ಮಕವಾಗಿ ನೇಯ್ದು ಅದ್ಭುತ ಕಾದಂಬರಿಯನ್ನಗಿ ಮಾಡುವ ಪರಿ, "ಇಂಥದು ಇಂಥದೇ" ಎಂದು ಸಾಧಾರವಾಗಿ, ನೇರವಾಗಿ ಹೇಳುವ ಆ ಧಾರ್ಷ್ಟ್ಯ.... ಇವೆಲ್ಲವನ್ನೂ ಬಹುಶಃ ಭೈರಪ್ಪನವರೊಬ್ಬರೇ ಮಾಡಬಲ್ಲರೇನೊ?..
ಇರಲಿ, .. ಮೊನ್ನೆಯೀಚೆಗೆ "ಆವರಣ" ಬಿಡುಗಡೆಯಾಯ್ತು ಎಂದು ಕೇಳ್ಪಟ್ಟೆ. ದಿನಕ್ಕೆರಡುಮೂರು ಸಾವಿರ ಪ್ರತಿಗಳು ಖಾಲಿಯಗುತ್ತಿವೆಯಂತೆ ಎಂಬ ಸುದ್ದಿ. ಬಹಳ ವಿವಾದತ್ಮಕ ಸಂಗತಿಗಳಿಂದ ಕೂಡಿದೆ ಅಂತ ಮತ್ತೊಂದು ಕಡೆಯಿಂದ ಸುದ್ದಿ. ಬೆಂಗಳೂರಿನಲ್ಲಿ ಎಲ್ಲಿ ಹುಡುಕಿದರೂ ಒಂದು ಪ್ರತಿಯೂ ಇಲ್ಲ. ಕೊನೆಗೆ "ಅಂಕಿತ ಪ್ರಕಾಶನ"ದ ಪ್ರಕಾಶ್ ಕಂಬತ್ತಳ್ಳಿಯವರಲ್ಲಿ ಕೇಳಿದಾಗ "ಮುಂದಿನ ವಾರ ಬರುತ್ತೆ. ಬಂದ ದಿನವೇ ತೊಗೊಂಡು ಹೋಗಿ, ಇಲ್ಲದಿದ್ದರೆ ಮತ್ತೆ ಖಾಲಿಯಾದೀತು" ಎಂಬ ಉತ್ತರ. ಸರಿ, ಅಂತೂ ತೊಗೊಂಡಿದ್ದಾಯ್ತು.... ಓದೋಣವೆಂದು ಕುಳಿತೆ.....

ಕೆಲ ಪ್ರಶ್ನೆಗಳು....
ಇತಿಹಾಸವನ್ನು ಓದಿದ ನಾವು, ಯಾವತ್ತಾದರೂ ಅದರ ಸತ್ಯಾಸತ್ಯತೆಗಳನ್ನು ಅವಲೋಕಿಸಿದ್ದೇವೆಯೆ?.. ಇತಿಹಾಸವೆಂಬುದು ಸತ್ಯದ ಬುನಾದಿಯ ಮೇಲೆ ನಿಂತಿರುವ ನಮ್ಮ ಪೂರ್ವಕಾಲವಲ್ಲವೆ?.. ಪ್ರತಿಯೊಬ್ಬ ಇತಿಹಾಸಕಾರನೂ ತನಗೆ ತೋಚಿದಂತೆ ಅಥವಾ ಕಾಲಕ್ಕೆ ತಕ್ಕಂತೆ(?) ಇತಿಹಾಸವನ್ನು ತಿರುಚಿ ಬರೆದರೆ, ಅದನ್ನು ಓದುವ, ಅದರಿಂದ ಸ್ಫೂರ್ತಿಗೊಳ್ಳುವ, ಇತಿಹಾಸದ ಪುಟಗಳ ನೆಲೆಗಟ್ಟಿನ ಮೇಲೆ ತಮ್ಮ ನಂಬಿಕೆಯ ಗಿಡ ಬೆಳೆಸಿಕೊಳ್ಳುವವರ ಪಾಡೇನು? ಇದು ಮನುಕುಲಕ್ಕೆ ಬಗೆದ ದ್ರೋಹವಲ್ಲವೆ?.... ಇವೆಲ್ಲವೂ ಭೈರಪ್ಪನವರು ನಮ್ಮ ಮುಂದಿಡುವ ಪ್ರಶ್ನೆಗಳು....

ಆವರಣದ ಮುನ್ನುಡಿಯಲ್ಲಿ.........
ಸತ್ಯವನ್ನು ಮರೆಮಾಚುವ ಪ್ರಕ್ರಿಯೆಯನ್ನು ಆವರಣ ಎನ್ನುತ್ತಾರೆ. ಅಸತ್ಯ ಎನ್ನುವುದು ತಮೋರೂಪಿ, ಅದು ಸತ್ಯವನ್ನು ಆವರಿಸಿ, ವಸ್ತುಸ್ಥಿತಿಯನ್ನು ಮರೆಮಾಚಿ, ಸನ್ನಿವೇಶವನ್ನು ಸಂದೇಹಕಾರಿಯಾಗಿ ಮಾಡುತ್ತದೆ. ನಿಜ-ಸುಳ್ಳುಗಳ ಜಿಜ್ಞಾಸೆಯನ್ನು ತತ್ವದ ಮಟ್ಟಕ್ಕೇರಿಸಿರುವುದು ಭಾರತೀಯ ದರ್ಶನಶಾಸ್ತ್ರದ(ದರ್ಶನಕಾರರ?) ವೈಶಿಷ್ಟ್ಯ. ವಿಪರ್ಯಾಸವೂ ಕೂಡ !! ಸಾರ್ಥದ ಕಾಲದ ಇತಿಹಾಸವು ಕಾಲದ ಆವರಣಶಕ್ತಿಗೆ ಒಳಗಾಗಿಲ್ಲ. ಆದರೆ "ಆವರಣ"ದ ಕಾಲವೇ ಬೇರೆ. ಇದು ಭಾರತ ಇತಿಹಾಸದ ಬಹಳ ಸಂಕೀರ್ಣ ಅವಧಿ. ಇಲ್ಲಿ ಬರುವ ಪ್ರತಿಯೊಂದು ಎಳೆಯನ್ನೂ, ಆವರಣವೆಂಬ ಗೋಡೆಯನ್ನು ಭೇದಿಸಿ ಸತ್ಯವೆಂಬ ಸಾಧಾರವಿರುವ ನೆಲೆಗಟ್ಟಿನ ಮೇಲೆ ನೇಯುವ ಅನಿವಾರ್ಯತೆಯಿದೆ. ಇತಿಹಾಸದ ಅನಾವರಣದ ಮಧ್ಯೆ ಇತಿಹಾಸಕಾರ ಅಡ್ಡ ನಿಂತರೆ ಅದು ಇತಿಹಾಸದರ್ಶನವಾಗುವುದಿಲ್ಲ, ಇತಿಹಾಸಗ್ರಹಣವಾಗುತ್ತದೆ. ಪೂರ್ವಿಕರ ಯಾವ ಕೃತ್ಯಗಳನ್ನು ತಿರಸ್ಕರಿಸಬೇಕು, ಯಾವ ಸಾಧನೆಗಳನ್ನು ಪುರಸ್ಕರಿಸಬೇಕು ಎಂಬ ವಿವೇಚನೆಯ ಮೇಲೆ ನಮ್ಮ ಪ್ರೌಢತೆಯಿದೆ.

ಮರಳಿ ಅನಿಸಿಕೆಗಳಿಗೆ....
ಹೀಗೆ ಸಾಗುತ್ತದೆ ಮುನ್ನುಡಿಯ ವಿಚಾರ ಲಹರಿ.. ಭೈರಪ್ಪನವರು ಕಾದಂಬರಿಯಲ್ಲಿ ಆಧಾರಗ್ರಂಥಗಳ ಉಲ್ಲೇಖವನ್ನೂ ಕೊಟ್ಟಿದ್ದಾರೆ ಎಂಬ ಮಾತನ್ನು ಕೇಳಿದ್ದೆ. ನೋಡೋಣ, ಕಾದಂಬರಿಯನ್ನು ಓದುವ ಮೊದಲು, ಆಧಾರ ಗ್ರಂಥಗಳ ಟಿಪ್ಪಣಿಯಿದೆಯೇ ಎಂದು ಪುಟಗಳನ್ನು ತಿರುವುತ್ತಾ ಹೋದೆ. ಒಳಗೆ ಮೂರ್ನಾಲ್ಕು ಕಡೆ(ಕಾದಂಬರಿಯ ಭಾಗವಾಗಿ), ಕೊನೆಯಲ್ಲಿ ೫೧ ಆಧಾರಗಳ ಉಲ್ಲೇಖವಿದೆ!! ಅಂತರ್ಜಾಲದಲ್ಲಿ ಹುಡುಕೊಣವೆಂದು ಎಲ್ಲವನ್ನೂ "ಗೂಗ್ಲಿಂಗ್" ಮಾಡಿದೆ. ಪ್ರತಿಯೊಂದಕ್ಕೂ (ಕೊನೆಯ, ವಿವೇಕಾನಂದರ ಮಾತುಗಳನ್ನು ಬಿಟ್ಟು) ಒಂದಲ್ಲಾ ಒಂದು ರೆಫೆರೆನ್ಸ್ ಇದ್ದವು(ಕುತೂಹಲವಿದ್ದರೆ ಹುಡುಕಿನೋಡಿ!!).
ಒಂದು ಮಾತು; ನಮ್ಮ ವಿಶ್ವ(ರಾವ್) ಹೇಳಿದಂತೆ "ಈ ಕಾದಂಬರಿಯೂ ಆಧರಿಸಿದ್ದು ಇತಿಹಾಸ ಗ್ರಂಥಗಳನ್ನೇ ತಾನೇ? ಅವುಗಳನ್ನು ಬರೆದವನೂ ಪೂರ್ವಾಗ್ರಹಕ್ಕೊಳಗಾಗಿದ್ದರೆ?".... ಎನೇ ಇರಲಿ, ಭೈರಪ್ಪನವರು ಕಾದಂಬರಿಯಲ್ಲಿ ಕೊಟ್ಟಿರುವ ಆಧಾರಗಳಲ್ಲಿ ಬರುವ ಸಂಗತಿಗಳು ಸತ್ಯವೆಂದೇ ಅಂದುಕೊಂಡು ಮುಂದುವರಿಯೋಣ(ಅಟ್ ಲೀಸ್ಟ್ ಫ಼ಾರ್ ದಿಸ್ ರೀಡಿಂಗ್).....
ಒಬ್ಬ ಕಾದಂಬರಿಕಾರ ಐತಿಹಾಸಿಕ ವಿಷಯವನ್ನು ಅದರಲ್ಲೂ ಒಂದು ಧರ್ಮದ ಕುರಿತಾಗಿ ಬರೆಯಬೇಕಾದರೆ, ತನ್ನ ಸುತ್ತಲಿರುವ ಎಲ್ಲಾ ಧರ್ಮಗಳ ವರ್ತುಲದಿಂದ ಹೊರಗೆ ನಿಂತು ವಿಶ್ಲೇಷಿಸಬೇಕಾಗುತ್ತದೆ. ಈ ಮನೋಧರ್ಮ ಭೈರಪ್ಪನವರ ಕಾದಂಬರಿಗಳ ಆಶಯಗಳಲ್ಲಿ ಎದ್ದು ಕಾಣುತ್ತವೆ.

ಒಳಾವರಣದಲ್ಲಿ......
ಅವರಣ.. ಅಲ್ಲ, ಕಾದಂಬರಿಯೊಳಗೊಂದು ಕಾದಂಬರಿ.... ಉಹುಂ, ಇತಿಹಾಸ-ವಾಸ್ತವಗಳ ಸಾಕ್ಷಚಿತ್ರ ಏನಾದರೂ ಕರೆಯಿರಿ ಇದನ್ನು...
ರಜಿಯಾ ಎಂಬ ಧರ್ಮಾಂತರಿತ ಮಹಿಳೆಯ ಯೊಚನಾ ಲಹರಿಯೊಂದಿಗೆ ಪ್ರಾರಂಭವಾಗುತ್ತದೆ ಕಾದಂಬರಿ. ಪ್ರೀತಿಗೆ ಸಿಲುಕಿದ ಲಕ್ಷ್ಮಿಯ ಆವೇಶ, ಸಿನಿಮಾ ತರಬೇತಿಯೆಂಬ ಅಧುನಿಕ ಮನಸು, ಸ್ವಧರ್ಮದ ಮೇಲೆ ಕಿಚ್ಚು ಮುಂತಾದವು ಯೌವನದ ಕ್ರಾಂತಿಕಾರಿ ಮನಸ್ಥಿತಿಯನ್ನು ಬಿಂಬಿಸುತ್ತವೆ. ಮದುವೆಯಾದಮೇಲೆ ಅವಳಿಗೆ ಎದುರಾಗುವ ಜಿಜ್ಞಾಸೆಗಳು, ಸಂಸಾರದಲ್ಲಿ ಕಾಣುವ ನೋವು-ಹತಾಶೆಯ ಮೂಲಕ ಲೇಖಕರು, ವಾಸ್ತವಿಕತೆಯಲ್ಲಿ ಯಾವ ಧರ್ಮವೂ ಇದಕ್ಕೆ ಹೊರತಾದುದಲ್ಲ ಎಂದು ಚಿತ್ರಿಸುತ್ತಾರೆ.
ಹಂಪೆಯ ಇತಿಹಾಸದ ಮೇಲೊಂದು ಸಾಕ್ಷಚಿತ್ರ ಮಾಡಹೊರಟು ಮತ್ತೆ ತನ್ನೂರಿಗೆ ಮರಳುವ ಲಕ್ಷ್ಮಿ, ಗತಕಾಲದ ಇತಿಹಾಸದ ಮೇಲೆ ಸಂಶೋಧನೆಗೆ ಹೊರಡುವ ಮೂಲಕ ಕಾದಂಬರಿಯ ಓಘಕ್ಕೆ ವೇಗ ದೊರಕುತ್ತದೆ..
ಟಿಪ್ಪೂಸುಲ್ತಾನನ ಕಾಲದ ಆಚರಣೆಗಳು, ಆಡಳಿತಪದ್ಧತಿ, ಮತಾಂತರದ ಪ್ರವೃತ್ತಿ ಮುಂತಾದವುಗಳು ನಮ್ಮನ್ನು ಯೋಚನೆಯ ಒರೆಗೆ ಹಚ್ಚುತ್ತವೆ. ಬರಿಯ ಟಿಪ್ಪೂಸುಲ್ತಾನನನ್ನೇ ಏಕೆ ರಾಷ್ಟ್ರನಾಯಕನನ್ನಾಗಿ ಬಿಂಬಿಸಿದ್ದಾರೆ, ಮರಾಠರನ್ನೇಕೆ ಇಲ್ಲ? ಎಂಬ ಪ್ರಶ್ನೆ ಪ್ರಚೋದನಕಾರ್‍ಇಯಾಗಿ ಮೂಡಿಬಂದಿದೆ.
ಕಾದಂಬರಿಯ ಮುಖ್ಯಕಥೆಗೆ ಪೂರಕವಾಗಿ ಕಥಾನಾಯಕಿಯ ಕಾದಂಬರಿಯೂ ಪ್ರಾರಂಭವಾಗುತ್ತದೆ. ಬಹುಶಃ ಈ ಪ್ರಕಾರದ ಕಾದಂಬರಿ, ನಾನು ಓದುತ್ತಿರುವುದು ಇದೇ ಮೊದಲು(ಕಾದಂಬರಿಯೊಳಗೊಂದು ಕಾದಂಬರಿ).
ಪುಟ್ಟ ರಜಪೂತ ರಾಜ್ಯದ ಮೇಲೆ ಮೊಗಲರ ಧಾಳಿ, ಗೆದ್ದಮೇಲೆ ಅವರು ನಡೆದುಕೊಳ್ಳುವ ರೀತಿ, ಅವರ ಪರಮ ಕ್ರೂರ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತವೆ. ಸೋತವರನ್ನು ತಮ್ಮ ಧರ್ಮಕ್ಕೆ ಸೇರೆಂದು ಪ್ರೇರೇಪಿಸುವ(ಇಲ್ಲ, ಬಲಪ್ರಯೋಗಿಸುವ) ಕೃತ್ಯ, ದೇವಾಲಯ ನಿರ್ನಾಮ, ವಿಗ್ರಹಭಂಜನೆ, ಊರ ಹೆಸರನ್ನು ಬದಲಿಸುವುದು.... ಛೇ, ಘೋರವಲ್ಲವೇ ಎನಿಸಿಬಿಡುತ್ತದೆ.
ಸೋತ ರಾಜ್ಯದ ಯುವಕರನ್ನು, ಯುವತಿಯರನ್ನು ತಮ್ಮತಮ್ಮಲ್ಲಿ ಹಂಚಿಕೊಂಡು ಗುಲಾಮರನ್ನಾಗಿ ಮಾಡುವುದು.. ಆ ಗುಲಾಮರಲ್ಲೂ ಉಚ್ಚ ನೀಚ ಭೇಧಭಾವ, ಗುಲಾಮರನ್ನು ಬೇರೆಯವರಿಗೆ ಮಾರುವುದು-ಉಡುಗೊರೆ ಕೊಡುವುದು.... ಏನಿದು? ಇವೆಲ್ಲಾ ನಿಜಕ್ಕೂ ಇದ್ದವೆ ಎಂದು ಆಶ್ಚರ್ಯವಾಗುತ್ತದೆ.
ಗಂಡು ಗುಲಾಮರನ್ನು ನಪುಂಸಕರನ್ನಾಗಿ ಮಾಡಿ ಅವರನ್ನು ಜನಾನಾಕ್ಕೋ, ಬೇರೆ ಸೇವೆಗೋ ಹಚ್ಚುವುದು(ಕಾದಂಬರಿಯ ವಿವರಣೆ ಘೋರವಾಗಿದೆ).... ಭಗವಂತಾ, ಯಾವರೀತಿಯ ಹಿಂಸೆಯಿದು?........
ತಮ್ಮ ಧರ್ಮದ ಬಗ್ಗೆ ಒಣಪ್ರತಿಷ್ಟೆ, ಢಾಂಬಿಕತನ, ತಾವೇ ಮೇಲೆಂಬ ಒಣವಾದ, ಮೊಗಲ್ ಕಾಲದ ದೊಡ್ಡ(?)ಮನುಷ್ಯರ(ಧಾರ್ಮಿಕ ಮುಖಂಡರುಗಳ) ಬಗ್ಗೆ ರೇಜಿಗೆ ಹುಟ್ಟಿಸುತ್ತವೆ. ತಾವು ಗೆದ್ದ ರಾಜ್ಯದಲ್ಲಿರುವ ದೇವಾಲಯಗಳನ್ನು ಒಡೆದು, ಅಲ್ಲಿನ ವಿಗ್ರಹಗಳನ್ನು ಮಸೀದಿಯ ಮೆಟ್ಟಿಲಾಗಿ ಮಾಡುವುದೆಂದರೇನು? ಮತಾಂಧತೆಯೆಂಬ ಹುಚ್ಚುತನದ ಪರಮಾವಧಿಯಲ್ಲವೆ?
ಮಾಡಿಕೊಂಡ ಹತ್ತಾರು ಹೆಂಡತಿಯರಲ್ಲದೆ, ದಾಸಿಯರನ್ನೂ...... ನೀವೇ ಮುಂದಕ್ಕೆ ಯೋಚಿಸಿ. ಮತಾಂತರಗೊಂಡ ರಾಜಕುಮಾರ(ಗುಲಾಮ)ನಿಗೂ, ಸಾಧುವಿಗೂ ನಡೆಯುವ ಧರ್ಮಗಳ ಮೇಲಿನ ಚರ್ಚೆ ನಿಜಕ್ಕೂ ಚೆನ್ನಾಗಿದೆ. ಹಿಂದೂ ಪೂಜ್ಯಸ್ಥಳಗಳ ಮೇಲೆ ನಡೆದ ಧಾಳಿ, ಅವುಗಳ ವಿರೂಪ, ರೊಚ್ಚು ಎಬ್ಬಿಸುತ್ತವೆ. ಅದರಲ್ಲೂ ಕಾಶಿ! ಈಗ ಪೂಜಿಸುವ ದೇವಾಲಯ ದೇವಾಲಯವೇ ಅಲ್ಲ, ಅದಿರುವುದು ಗ್ಯಾನವಾಪಿ ಮಸೀದಿಯಾಗಿ ಎಂಬ ಅಂಶ ದಿಗ್ಭ್ರಮೆ ಮೂಡಿಸುತ್ತದೆ. ಪ್ರತಿಯೊಂದು ಇತಿಹಾಸಪ್ರಸಿದ್ಧ "ಘಾಟ್"ಗಳ ಹಿಂದೆಯೂ ಈ ರೀತಿಯ ನೋವಿನ ಕಥೆಯಿದೆಯೆಂಬುದು ನಮ್ಮನ್ನು ನಿಜವಾಗಿಯೂ ತಟ್ಟುತ್ತದೆ. ಔರಂಗಜೇಬನ ಅವಿವೇಕಿ, ಅತಿರೇಕಿ ವ್ಯಕ್ತಿತ್ವ ಇತಿಹಾಸದ ಮೇಲೆಳೆದ ಬರೆಯಂತೆ ಕಾಣಿಸುತ್ತದೆ.
ಲಕ್ಷ್ಮಿಯು ಬರೆದ ಕಾದಂಬರಿಯ ಮೇಲೆ ಅಸಡ್ಡೆ ತಾಳುವ ಅತಿಬುದ್ಧಿಜೀವಿ ವಿಮರ್ಶಕ ಸಾಹಿತಿಗಳು, ಪ್ರೊಫೆಸರರೆಂಬ ಜಾತ್ಯಾತೀತ ಸೋಗಿನ ಅಷಾಢಭೂತಿ ಪಾತ್ರ, ಲಕ್ಷ್ಮಿಯ ಕಾದಂಬರಿಯ ಅಷ್ಟೂ ಪ್ರತಿಗಳನ್ನೂ ಮುಟ್ಟುಗೋಲು ಹಾಕಿಕೊಳ್ಳುವ ಅರಿವುಗೇಡಿ ಸರ್ಕಾರ.... ಎಲ್ಲವೂ ವಾಸ್ತವಿಕತೆಯ ಅತಿಘೋರ ಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ..........

ಅರಿಕೆ....
ಈ ಮೇಲಿನ ಒಳಾವರಣದ ಅನಾವರಣದಲ್ಲೇನಾದರೂ ನ್ಯೂನ್ಯತೆಯಿದ್ದರೆ, ದಯವಿಟ್ಟು ತಿಳಿಸಿ; ಹಾಗೆಯೇ, "ಆವರಣ" ಕುರಿತು ನಿಮ್ಮ ಅಭಿಪ್ರಾಯವನ್ನೂ ಕೂಡಾ.... ನನ್ನ ಈ ಅನಾವರಣ, ಓದುವಷ್ಟು ಸಹ್ಯವಾಗಿದ್ದರೆ ಕೃತಜ್ಞ.
ವಿಶ್ವಾಸವಿರಲಿ,
ಎಲ್.ಡೀ...........

Wednesday, February 14, 2007

ಆತ್ಮೀಯ "ಬಳೆಗಾರ"ನಿಗೊಂದು ಅಕ್ಷರ ಶ್ರದ್ಧಾಂಜಲಿ....

ಶಿವಮೊಗ್ಗ ವೆಂಕಟೇಶ್ ಇನ್ನಿಲ್ಲ.. ಮೈಸೂರು ಮಲ್ಲಿಗೆಯ "ಭಾಗ್ಯದ ಬಳೆಗಾರ" ನಿರ್ಗಮಿಸಿದ್ದಾರೆ.
ರಂಗಭೂಮಿಯೊಡನೆ ನಿಕಟ ನಂಟು ಹೊಂದಿದ್ದ ವೆಂಕಟೇಶ್, ತಮಗೆ ಸಿಕ್ಕಿದ್ದ ಕೆಲವೇ ಅವಕಾಶಗಳನ್ನೂ ಸಮರ್ಥವಾಗಿ ನಿಭಾಯಿಸಿದವರು.
ಸುಮಾರು 15-16 ವರ್ಷಗಳ ಹಿಂದೆ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ "ದಾಳ" ಫೋಟೋಕಾಮಿಕ್ ನಲ್ಲಿ ಮೊದಲು ಅವರ ಪರಿಚಯ. ನಂತರ ಕೆಲವು ಧಾರವಾಹಿಗಳಲ್ಲಿ....ಮೈಸೂರು ಮಲ್ಲಿಗೆ ಚಿತ್ರದ ಬಳೆಗಾರನಾಗಿ ತಮ್ಮ ಪ್ರತಿಭೆಯ ಅನಾವರಣ.
ಆದರೆ ವಿಧಿಯ ವಿಪರ್ಯಾಸ, ಅವರ ಪ್ರತಿಭೆಗೆ ಮನ್ನಣೆ ಸಿಗಲೇ ಇಲ್ಲ. ಇದಕ್ಕಾಗಿ ಅವರು ಬಹಳ ನೊಂದುಕೊಂಡಿದ್ದೂ ಹೌದು. ಮೊನ್ನೆಯೀಚೆಗೆ ಇಹಲೋಕದಿಂದ ದೂರ ಪಯಣ. ಕೊನೆಯ ಗಳಿಗೆಯಲ್ಲು ಆ ನೋವು ಅವರನ್ನು ಕಾಡುತ್ತಿತ್ತು ಎಂದು ಅವರ ಆಪ್ತರ, ಅಭಿಮಾನಿಗಳ ಅಭಿಪ್ರಾಯ.

Deepu, i'm sorry that i could not contact you....